ಹವ್ಯಕ ಮಾಸ ಪತ್ರಿಕೆ
ಶ್ರೀ ಅಖಿಲ ಹವ್ಯಕ ಮಹಾಸಭೆಯ ಮುಖವಾಣಿ ‘ಹವ್ಯಕ’ ಪತ್ರಿಕೆಯು ವಜ್ರ ಮಹೋತ್ಸವದ ಸಂಭ್ರಮದಲ್ಲಿದ್ದು, ನಿರಂತರ 60 ವರ್ಷಗಳ ಸಾರ್ಥಕ ಪಯಣವನ್ನು ಮುಂದುವರಿಸಿದೆ. 1966 ರ ಜೂನ್ 05 ರಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳು ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿ “ಧಾರ್ಮಿಕ – ಲೌಕಿಕ ಆಚಾರ ವಿಚಾರಗಳ ಪ್ರಚಾರ, ಸಾಹಿತ್ಯ – ಸಂಸ್ಕೃತಿಗಳ ಅಭಿವೃದ್ಧಿ, ಸಂಪರ್ಕ – ಸಂಘಟನೆ ಇತ್ಯಾದಿ ಧ್ಯೇಯಗಳ ಗತಿಯಲ್ಲಿ ’ಹವ್ಯಕ’ ಮುಂದೆ ಮಾಸಪತ್ರಿಕೆಯಾಗಿ ಪರಿವರ್ತನೆಯಾಗಲಿ…” ಎಂದು ಶುಭ ಹಾರೈಸುವುದರ ಜೊತೆಗೆ, ಸುವರ್ಣ ಮಂತ್ರಾಕ್ಷತೆ ಹಾಗೂ ‘ಸಂಘಟನೆ’ ಎಂಬ ಲೇಖನವನ್ನೂ ನೀಡಿ ಆಶೀರ್ವದಿಸಿದರು. ಶ್ರೀರಾಮಚಂದ್ರಾಪುರ ಮಠ ಹಾಗೂ ಶ್ರೀ ಸ್ವರ್ಣವಲ್ಲೀ ಮಠಗಳ ಉಭಯ ಶ್ರೀಗಳ ಆಶೀರ್ವಾದ ಸಂದೇಶವನ್ನು ಹೊತ್ತು ಸಮಾಜ ಹಾಗೂ ಸಂಘಟನೆಯ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸಲು ಹವ್ಯಕ ಪತ್ರಿಕೆಯು ನಾಂದಿ ಹಾಡಿತು.
ಪತ್ರಿಕೆ ಲೋಕಾರ್ಪಣೆಗೂ ಮುನ್ನ ಸುಮಾರು ಒಂದು ವರ್ಷದ ಮೊದಲು ದಿನಾಂಕ 10.07.1965 ರಂದು ನಡೆದ ಕಾರ್ಯಕಾರಿ ಸಮಿತಿಯ ಸಭೆಯು ‘ಹವ್ಯಕ’ವೆಂಬ ಮಹಾಸಭೆಯ ಮುಖವಾಣಿಯನ್ನು ಆರಂಭಿಸಲು ನಿರ್ಧರಿಸಿತು. 61 ವರ್ಷಗಳ ಮೊದಲು ತೆಗೆದುಕೊಂಡ ಈ ನಿರ್ಣಯದ ಕೈಬರಹದ ದಾಖಲೆಯು ಇಂದಿಗೂ ಸಂರಕ್ಷಿತವಾಗಿರುವುದು ವಿಶೇಷವಾಗಿದೆ.
ಮೊದಲು ತ್ರೈಮಾಸಿಕವಾಗಿ ಆರಂಭವಾದ ಪತ್ರಿಕೆ, 1981 ರ ಜನವರಿಯಿಂದ ಮಾಸಪತ್ರಿಕೆಯಾಗಿ ಹೊಸ ರೂಪವನ್ನು ಪಡೆಯಿತು. ನಿರಂತರತೆ ‘ಹವ್ಯಕ’ದ ಹೆಮ್ಮೆಯಾಗಿದ್ದು, ಕಳೆದ 60 ವರ್ಷಗಳಿಂದ ನಿರಂತರವಾಗಿ ಸಮಾಜದ ಧ್ವನಿ ಹಾಗೂ ಕನ್ನಡಿಯಾಗಿ ಪ್ರಕಾಶಿವಾಗುತ್ತಿದೆ. ತುರ್ತುಪರಿಸ್ಥಿತಿಯ ಸಂಧರ್ಭದಲ್ಲಿ ವಿಧಿಸಲ್ಪಟ್ಟ ನಿರ್ಬಂಧಗಳು ಹಾಗೂ ಕೋವಿಡ್ ಸಮಯದಲ್ಲಿನ ಸರ್ಕಾರೀ ನಿಯಮಾವಳಿಗಳ ಅನ್ವಯ ಪ್ರಕಾಶಿತವಾಗದಿರುವುದನ್ನು ಹೊರತುಪಡಿಸಿದರೆ, ಆರ್ಥಿಕ ಹಾಗೂ ಆಡಳಿತಾತ್ಮಕ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಪತ್ರಿಕೆ ಓದುಗರ ಕೈಸೇರುತ್ತಿರುವುದು ‘ಹವ್ಯಕ’ದ ಹೆಚ್ಚುಗಾರಿಕೆ.
ಸಂಸ್ಥೆಯೊಂದು ಸದೃಢವಾಗಿ ಬೆಳೆಯಲು ಸಮರ್ಥ ಸಂವಹನ ಮಾಧ್ಯಮ ಅತ್ಯವಶ್ಯ. ಈ ಅಂಶವನ್ನು ಪ್ರಥಮ ಸಂಚಿಕೆಯ ಪ್ರಥಮ ಸಂಪಾದಕೀಯದಲ್ಲಿ ಅಂದಿನ ಅಧ್ಯಕ್ಷರು ಹಾಗೂ ಸಂಪಾದಕರಾಗಿದ್ದ ಎ.ಭೀಮ ಭಟ್ಟರು ಪ್ರಸ್ತಾಪಿಸಿದ್ದು, ಹವ್ಯಕ ಮಹಾಸಭೆಯು ಸಮಾಜದ ಹಾಗೂ ನಾಡಿನ ಹೆಮ್ಮೆಯಾಗಿ ರೂಪುಗೊಳ್ಳುವುದರಲ್ಲಿ ಪತ್ರಿಕೆಯ ಪಾತ್ರ ಬಹುದೊಡ್ಡದಿದೆ. ಹಾಗೆಯೇ ಹತ್ತಾರು ರೀತಿಯಲ್ಲಿ ಸಾವಿರಾರು ಸಮಾಜ ಬಂಧುಗಳು ಹವ್ಯಕ ಪತ್ರಿಕೆಯಿಂದ ಪ್ರಯೋಜನ ಪಡೆದಿರುವುದನ್ನು ಅಲ್ಲಗಳೆಯುವಂತಿಲ್ಲ. ‘ಹವ್ಯಕ’ ಪತ್ರಿಕೆಯು ಪ್ರತಿತಿಂಗಳು ಸುಮಾರು 30 ಸಾವಿರ ಕುಟುಂಬವನ್ನು ತಲುಪುತ್ತಿದ್ದು, ಓದುಗರ ಪ್ರೀತಿ ವಿಶ್ವಾಸವನ್ನುಗಳಿಸಿದೆ ಮತ್ತು ಇದು ‘ಹವ್ಯಕ’ದ ಶಕ್ತಿಯೂ ಆಗಿದೆ.
ಹವ್ಯಕ ಪತ್ರಿಕೆಯು ಒಂದು ದೃಷ್ಟಿಯಲ್ಲಿ ಹವ್ಯಕರ ಇತಿಹಾಸ ದರ್ಶನವೇ ಆಗಿದ್ದು, ಹವ್ಯಕ ಮಹಾಸಭೆಯ ಕಾರ್ಯಕ್ರಮಗಳು, ಸಮಾಜಕ್ಕೆ ನೀಡುವ ಸಂದೇಶಗಳನ್ನು ‘ಹವ್ಯಕ’ವು ಮಹಾಸಭೆಯ ಮುಖವಾಣಿಯಾಗಿ ಹೊತ್ತು ತರುವುದರ ಜೊತೆಗೆ, ಸಮಾಜದ ನೋವು – ನಲಿವು, ಸಾಧಕರ ಪರಿಚಯ, ಮೌಲಿಕ ಲೇಖನಗಳು, ಸಾಮಾಜಿಕ ಪ್ರಜ್ಞೆಯನ್ನು ಸಂವೃದ್ಧಿಸುವ ಒಳಸುಳಿಗಳು, ಸಕಾಲಿಕ ಮಾಹಿತಿಗಳನ್ನು ಕಳೆದ 60 ವರ್ಷಗಳಿಂದ ತನ್ನೊಡಲಿನಲ್ಲಿ ಹೊತ್ತು ತಂದಿದೆ.
ಹೈಗುಂದವೆಂಬ ಪುಟ್ಟ ದ್ವೀಪದಲ್ಲಿ ಹವ್ಯಕರೆಂಬ ಹೆಸರನ್ನು ಪಡೆದು ಬೆಳೆಯಲು ಆರಂಭವಾಗದ ಹವ್ಯಕ ಸಮುದಾಯ, ಜಗದಗಲ ವಿಸ್ತರಿಸಿದೆ. ನಮ್ಮ ಸಮಾಜದ ವಿಚಾರಗಳನ್ನು ಜಗತ್ತಿನೆಲ್ಲೆಡೆ ನೆಲಸಿರುವ ಹವ್ಯಕ ಬಂಧುಗಳಿಗೆ ಅವರಿರುವಲ್ಲಿಯೇ ಮುಟ್ಟಿಸುವ ಎತ್ತರಕ್ಕೆ ’ಹವ್ಯಕ’ವೂ ಬೆಳದಿದೆ. 60 ವರ್ಷಗಳ ಸಾರ್ಥಕ ಪಯಣವನ್ನು ಮುಂದುವರಿಸಿರುವ ‘ಹವ್ಯಕ’ವು ಅಂದಂದಿನ ಸಂಪಾದಕರು, ಸಂಚಾಲಕರು ಹಾಗೂ ಆಡಳಿತ ಮಂಡಳಿಯ ಪರಿಶ್ರಮದಿಂದಾಗಿ ಆಯಾಯ ಕಾಲಕ್ಕೆ ತಕ್ಕಂತೆ ಗುಣಾತ್ಮಕವಾಗಿ ಬದಲಾಗುತ್ತಾ ; ಎಲ್ಲಾ ಆಯಾಮಗಳಿಂದಲೂ ಬಲಗೊಳ್ಳುತ್ತಾ ; ಅಂದವನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿರುವುದನ್ನು ಕಾಣಬಹುದಾಗಿದೆ.
‘ಹವ್ಯಕ’ವು ಐತಿಹಾಸಿಕವಾಗಿ ಸಾಗಿಬರಲು ಹಲವರ ಸತತ ಪರಿಶ್ರಮವಿದೆ. ಅಂದಿನಿಂದ ಇಂದಿನವರೆಗಿನ ಆಡಳಿತ ಮಂಡಳಿ, ಸಂಪಾದಕರು, ಸಂಚಾಲಕರು, ಪತ್ರಿಕಾ ಸಮಿತಿ, ಸಂಪಾದಕೀಯ ಮಂಡಳಿ, ಲೇಖಕರು, ಜಾಹಿರಾತುದಾರರು, ಮುದ್ರಕರು, ಅಂಚೆ ಇಲಾಖೆ ಸಿಬ್ಬಂದಿಗಳು, ಓದುಗರು ಹಾಗೂ ಮಹಾಸಭೆಯ ಸಿಬ್ಬಂದಿ ವರ್ಗದ ಸೇವೆ ಹಾಗೂ ಶ್ರಮ ಉಲ್ಲೇಖಾರ್ಹ.
ಕಾಲಚಕ್ರ ತಿರುಗಿದೆ. ಪ್ರಭವಾದಿ ಸಂವತ್ಸರಗಳ ಮಾಲೆಯಲ್ಲಿ ಒಂದು ಸುತ್ತನ್ನು ಪೂರ್ಣಗೊಳಿಸಿರುವ ಹವ್ಯಕ ಮಹಾಸಭೆಯು ಮತ್ತೊಮ್ಮೆ ಇಪ್ಪತ್ತರ ಹರೆಯದಲ್ಲಿದೆ. ‘ಹವ್ಯಕ’ ಪತ್ರಿಕೆಯು ಒಂದು ಸಂವತ್ಸರ ಚಕ್ರವನ್ನು ಪೂರ್ಣಗೊಳಿಸುತ್ತಿದೆ. ಅರವತ್ತೆಂದರೆ ಅದು ಮತ್ತೊಮ್ಮೆ ಅರಳುವ ಹೊತ್ತು. ಷಷ್ಟ್ಯಬ್ದದ ಸಂಭ್ರಮದಲ್ಲಿರುವ ನಮ್ಮ ಹವ್ಯಕ ಪತ್ರಿಕೆಯನ್ನು ಇನ್ನಷ್ಟು ಬೆಳೆಸಲು ಓದುಗರಾದ ಸಮಾಜ ಬಂಧುಗಳ ಸಹಕಾರ ಅತ್ಯಗತ್ಯ. ಪತ್ರಿಕೆಯ ಬೆಳವಣಿಗೆಯ ಹಾದಿಯಲ್ಲಿ ಬರುವ ಪ್ರತಿಸ್ಪಂದಗಳಿಗೆ ’ಹವ್ಯಕ’ ಸದಾ ಮುಕ್ತವಾಗಿರಲಿದೆ. ಸಮಾಜದ ಧ್ವನಿಯಾಗಿ ಹಾಗೂ ಮಹಾಸಭೆಯ ಮುಖವಾಣಿಯಾಗಿ ’ಹವ್ಯಕ’ ಮಾಸಪತ್ರಿಕೆಯು ತನ್ನದೇ ಆದ ವೈಶಿಷ್ಟ್ಯವನ್ನು ಉಳಿಸಿಕೊಂಡು ಮುನ್ನಡೆಯಲು ಸಮಾಜದ ಸಹಕಾರವಿರಲಿ ಎಂಬ ಸದಾಶಯ ಹವ್ಯಕ ಪತ್ರಿಕೆಯದ್ದು.


